ಬಿ.ಕಾಂ ಮೊದಲ ವರ್ಷದ ವಿಷಯಗಳಲ್ಲಿರುವ ಕೆಲವು ಕಾವ್ಯ , ಕವನಸಂಕಲಗಳನ್ನು ಬರೆದಿಡುವ ಒಂದು ಚಿಕ್ಕ ಪ್ರಯತ್ನ.
Tuesday, 21 July 2015
2} ರೈಲ್ವೇ ನಿಲ್ದಾಣದಲ್ಲಿ
Monday, 20 July 2015
3 } ಜಡೆ ಕಾವ್ಯ
3 . ಜಡೆ
- ಜಿ.ಎಸ್.ಶಿವರುದ್ರಪ್ಪ
ಜಡೆ ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ. ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು ಅತ್ತಿತ್ತ ಹರಿದ ಜಡೆ ! ಚೇಳ್ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ ! ಎಣ್ಣೆ ಕಾಣದ ಹಿಣಿಲು ಹಿಣಿಲಾಗಿ ಹೆಣೆದ ಜಡೆ ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು ಜಡೆ ! ಅಕ್ಕ ತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ ಕೇದಗೆಯ ಹೆಣೆದ ಜಡೆ, ಮಾತೃಮಮತಾವೃಕ್ಷ ಬಿಟ್ಟ ಬೀಳಲಿನಂತೆ ಹರಡಿರುವ ತಾಯ ಜಡೆ ! “ಕುರುಕುಲ ಜೀವಾಕರ್ಷಣ ಪರಿಣತ”-ಆ ಪಾಂಚಾಲಿಯ ಜಡೆ ! ಸೀತೆಯ ಕಣ್ಣೀರೊಳು ಮಿಂದ ಜಡೆ ಓ ಓ ಈ ಜಡೆಗೆಲ್ಲಿ ಕಡೆ ! * * * ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ ಬೆಳ್ಳಕ್ಕಿಗಳ ಜಡೆ ಕ್ರೌಂಚಗಳ ಜಡೆ ಮರ ಮರದಿ ಬಳುಕುತಿಹ ಹೂಬಿಟ್ಟ ಬಳ್ಳಿ ಜಡೆ ಕಾಡು ಬಯಲಿನ ಹಸುರು ಹಸರದಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ ! ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ ! ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂದ ಕಾನನದ ಹಸುರು ಜಡೆ ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ ! ಮುಂಗಾರು ಮೋಡಗಳು ದಿಕ್ಕುದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ ! ಚಂದ್ರಚೂಡನ ವ್ಯೋಮಕೇಶನ ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ ಎಲ್ಲವೂ ರಮ್ಯವೆಲ್ಲ ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ !
1} . ಗೊಬ್ಬರ ಕಾವ್ಯ
1. ಗೊಬ್ಬರ
- ಕುವೆಂಪು
ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ? ಹಾ ಕಡುಕಷ್ಟ! ಕಲಿಕಾಲಕೇನೇನು ಬಂದಪುದೊ? ಸಾಲದೇಂ ಪ್ರಲಯಕಿದೆ ಪೀಠಿಕೆ? ಇನ್ನೇನು ಕಾರಣಂ ಬೇಕಯ್ಯ ನಿನಗೆ, ತಾಂಡವ ಮೂರ್ತಿ, ಕಲ್ಕ್ಯಾವತಾರವನ್ನೆತ್ತಿಬರೆ? ಇದಕಿಂತ ಧರ್ಮವಧೆ ಬೇರುಂಟೆ? ನಿರ್ಮಲ ಸರಸ್ವತಿಯ ವೀಣೆಯಂ ಶೂದ್ರಂ ಕಸಿದುಕೊಂಡು ಗೊಬ್ಬರದ ಗುಂಡಿಯನ್ನಗೆಯೆ ಗುದ್ದಲಿಯ ಮಾಡಿಹನಲ್ಲ! ಶಿವನೆ, ಭೈರವನಾಗಿ ಬಂದು ಹಣೆಗಣ್ಣಿನಿಂ ಕಿಡಿಗೆದರಿ ಬೂದಿ ಮಾಡದೆ ಸುಮ್ಮನಿಹೆಯಲ್ಲ!”
“ಕವಿತೆ, ಭೂಪಾಲರರಮನೆಯಲ್ಲಿ ಕೈ ಕೆಸರು ಮಾಡಿಕೊಳದೆಯೆ ಮೊಸರನುಣುತಿರ್ದ ಪಂಡಿತರ ದಿವ್ಯ ಜಿಹ್ವಾ ಲಸದ್ರಂಗದಲಿ ಕುಣಿದಾಡಿ ಸುಳಿದಾಡಿ ನಲಿದಾಡಿದಾ ನೀನು, ಹಾ! ಇಂದು ಕೊಳೆತು ನಾರುವ ರೈತನೊಡಗೂಡಿ ಒದ್ದಾಡಿ, ಗಂಧ ಪುನುಗು ಜವಾಜಿ ಕಸ್ತೂರಿಗಳನುಳಿದು ಸೆಗಣಿಗಂಪಘ್ರಾಣಿಪಂತಾಯ್ತೆ? ಕೋಕಿಲೆಯ ಸ್ತೋತ್ರಗೈದಾ ನೀನು ಪಾಳುಗೂಬೆಯ ಕುರಿತು ಪಾಡುವಂತಾಯ್ತೆ? ಪೆರೆನೊಸಲು, ಕೆಂದುಟಿ, ಕೆನ್ನೆ, ಚಂದ್ರಾನನಂ, ಕಮಲನಯನಂ, ಲಸನ್ನೀಲ ಕುಂತಳಂ, ಚಾರು ವಕ್ಷಸ್ಥಳಂ, ನುಣ್ಪು ತೊಡೆ, ಜಘನಂ ನಿತಂಬಂಗಳಲಿ, ಕೆಂದಾವರೆಯ ಮೆಲ್ಲಡಿಗಳಲಿ ವಿಹರಿಸಿದ ಕಾವ್ಯಪಂಕಜೆಯೆ, ನಿನಗಿಂದು ಕೆಸರೆ ಮನೆಯಾಗಿದೆಯೆ? ನಂದನಂ ಮರುಭೂಮಿಯದುದೇ? ರಣವೀರ ಪಾರ್ಥಿವರ ರಕ್ತತೃಷ್ಣೆಯ ಕರ್ಮಮಂ, ಖಡ್ಗಧನುಗಳಂ, ಬಾಣಪ್ರಯೋಗ ಕೌಶಲಮಂ, ಕಿರೀಟಾದಿ ವಸನ ಭೂಷಣ ತನುತ್ರ ಶಿರತ್ರ ವಿಭವಮಂ ವರ್ಣಿಸಿದ ನೀನಿಂದು ನೇಗಿಲಂ ಹಾರೆಯಂ ಮಣ್ಣಗೆವ ಕಜ್ಜಮಂ ನೆರೆ ವರ್ಣಿಪಂತಾಯ್ತೆ? ದುಷ್ಯಂತ ದಶರಥ ಶ್ರೀರಾಮನರ್ಜುನಂ ಕೌಶಿಕ ಪರಶುರಾಮ ಭೀಷ್ಮದ್ರೋಣಾದ್ಯರಂ ಬಣ್ಣಿಸಿದ ನೀನು-ಕರಿಸಿದ್ದ ಕಿಟ್ಟಯ್ಯರಂ, ದುರ್ದಮ ಕುರುಕ್ಷೆತ್ರಮಂ ಮೇಣ್ ಪುರಾಣದಾ ಲಂಕೆಯನ್ನುಳಿದು ಹಾ! ಒಂಟಿಕೊಪ್ಪಲಿನಾಚೆ ಬೋಡದ ಬೋರೆಯಂ, ಮಲೆನಾಡ ಕೊಂಪೆಯಾ ಕಾಡು ಮೇಡುಗಳಂ ಕುರಿತ್ತುಲಿವ ಗತಿಯಾಯ್ತೆ?”
“ಕಬ್ಬಿಲರು ಕಬ್ಬಿಗರು ತಾವೆನುತ್ತಬ್ಬರಿಸಿ ಬೊಬ್ಬಿರಿಯೆ ಕಬ್ಬವದುದೆ? ಗೊಬ್ಬರದ ಮೇಲೆ ಕಬ್ಬವಪ್ಪೊಡೆ ಗಂಡು ಗಬ್ಬವಾದಂತಲ್ತೆ? ಅಬ್ಬಬ್ಬ, ಕಲಿಕಾಲಕೇನದರಾಗುತದೆ!” “ಗೊಬ್ಬರವನಲ್ಲಗಳೆಯುವೆ ಏಕೆ ಮರದ ತುದಿ ನಲ್ಗಂಪುವೆತ್ತು ತಂಗಾಳಿಗೊಲೆಯುವ ಹೂವೆ? ಬೇರುಗಳಿಗಿಲ್ಲದಿರೆ ಗೊಬ್ಬರಂ, ಹೇಳೆನಗೆ, ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? ಹಳಿಯದಿರೊ; ಇಂದು ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು!”
“ಹಚ್ಚಿಕೊಳ್ಳಿರೊ ಹಚ್ಚಿಕೊಳ್ಳಿ ಪರಿಮಳಗಳಂ ಗಂಧ ಅತ್ತರು ಪುನುಗು ಕಸ್ತೂರಿ ಇತ್ಯಾದಿ ತರತರದ ಭೋಗಮಮ್! ಇನ್ನೇಸು ದಿನ ತಾನೆ ಹಚ್ಚಿಕೊಳ್ಳುವಿರದನು ನಾ ಕಣ್ಣಿನಲೆ ಕಾಂಬೆ! ನಾಮ ಮುದ್ರೆ ವಿಭೂತಿಗಳ ಬಳಿದುಕೊಂಬವರು ಕತ್ತೆಯಂದದಿ ಗದ್ದೆಯಲಿ ಗೆಯ್ದ ಮೈಬೆವರು ಸುರಿಸಿ ಗೊಬ್ಬರ ಮಣ್ಣು ಬಳಿದುಕೊಂಬರಿಗಿಂತ ಮೇಲೆಂಬ ಭಾವ ತಲೆಕೆಳಗಾಗಿ ಹೋಗುತಿದೆ! ನೇಗಿಲ ಕುಳಂ ದೊರೆಯ ಕತ್ತಿಯಂ ಕಿತ್ತೆಸೆದು, ಮುತ್ತಿನುಂಡೆಯ ಮುಡಿವ ಸಿರಿನೆತ್ತಿಯನ್ನುತ್ತು ಬತ್ತಮಂ ಬಿತ್ತಿ ಬೆಳೆಯುವ ಉತ್ತಮದ ಹೊತ್ತು ಹತ್ತಿರಕೆ ಹತ್ತಿರಕೆ ಬರುತಿರಿವುದೊತ್ತೊತ್ತಿ! ಗೊಬ್ಬರಂ ಸಿಂಹಾಸನಕ್ಕೇರಿದಾ ದಿನಂ ತನ್ನ ಹೊಗಳಿದ ಕಬ್ಬಿಲನ ಕಬ್ಬಿಗನ ಮಾಡಿ ಮೆರೆಯುವುದು! ಅಂದು ಗೊಬ್ಬರದ ಕಂಪೆಲ್ಲರ್ಗೆ ಪರಿಮಳದ್ರವ್ಯ ತಾನಾದಪುದು! ಏತಕೆನೆ, ಸಿರಿವೆರಸು ಶಕ್ತಿಯಿರೆ ಗೊಬ್ಬರವೆ ಪರಿಮಳಂ; ಇಲ್ಲದಿರೆ ಪುನುಗು ತಾನಾದೊಡಂ ಗೊಬ್ಬರಂ!
B.com 1st year Kannada
ಪರಿವಿಡಿ
| ಹೊಸಗನ್ನಡ ಕಾವ್ಯ
------------------
1} ಗೊಬ್ಬರ - ಕುವೆಂಪು
2} ರೈಲ್ವೇ ನಿಲ್ದಾಣದಲ್ಲಿ - ಕೆ.ಎಸ್.ನರಸಿಂಹಸ್ವಮಿ
3} ಜಡೆ - ಜಿ.ಎಸ್.ಶಿವರುದ್ರಪ್ಪ
4} ಮಳೆರಾಜನ ಹಾಡು - ಜನಪದ ಸಾಹಿತ್ಯ
|| ಕಿರು ಕಾದಂಬರಿ
------------------------
1} ನಿಗೂಢ ಮನುಷ್ಯರು (ಕಿರು ಕಾದಂಬರಿ)
- ಪೂರ್ಣಚಂದ್ರ ತೇಜಸ್ವಿ
||| ಸಂಕೀರ್ಣ ಲೇಖನಗಳು
1} ಕುಸಿಯುತ್ತಿರುವ ಸಾಂಸ್ಕೃತಿಕ ನೆಲೆಗಳು - ರಂಜಾನ್ ದರ್ಗಾ
2} ಶತಮಾನದ ಬಾಳಪ್ಪ - ಗುಡಿಹಳ್ಳಿ ನಾಗರಾಜ
3} ಬಾ ಇಲ್ಲಿ ಸಂಭವವಿಸು - ಆನಂದತೀರ್ಥ ಪ್ಯಾಟಿ
¡¡¡¡ ವಾಣಿಜ್ಯ ಕನ್ನಡ ಲೇಖನಗಳು
1} ಗರಿಷ್ಠ ಮಾರಾಟದರ(ಎಂಆರ್ ಪಿ) - ಸುಚೇತನ ನಾಯ್ಕ
2} ಭದ್ರತಾರಹಿತ ಸಾಲವೆಂಬ ವರದಾನ - ಗಿರೀಶ್ ದೊಡ್ಡಮನಿ
3} ಅತಿಸಣ್ಣ , ಸಣ್ಣ ಪ್ರಮಾಣದ ಉದ್ಯಮಗಳು ಹಾಗೂ ವಿಶೇಷ ಆರ್ಥಿಕ ವಲಯ(ಎಸ್ ಇ ಝೆಡ್) - ಮುರುಳೀಧರ ಬಿ. ಕುಲಕರ್ಣಿ
***ಮುಕ್ತಾಯ***